ಬ್ಯಾಂಕ್ ಜನಾರ್ಧನ್ ಕುಟುಂಬಸ್ಥರು ಹಿರಿಯ ನಟನ ಅನಾರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬ್ಯಾಂಕ್ ಜನಾರ್ಧನ್ ಪುತ್ರ ಗುರುಪ್ರಸಾದ್ ಅವರು ನನ್ನ ತಂದೆ 20 ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಕಳೆದ ವಾರ ಡಿಸ್ಚಾರ್ಜ್ ಮಾಡಿ, ಮನೆಗೆ ಕರ್ಕೊಂಡು ಹೋಗಿದ್ವಿ. ಮೂರು ದಿನಗಳಿಂದ ಆರೋಗ್ಯದಲ್ಲಿ ಮತ್ತೆ ಏರುಪೇರು ಆಗಿ ಮತ್ತೆ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ವಿ. ನಿನ್ನೆ ತುಂಬಾ ಉಸಿರಾಟದ ಸಮಸ್ಯೆಯಾಗಿತ್ತು. ನಮ್ಮ ತಂದೆಯನ್ನ ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಿದ್ವಿ. ಆದರೆ ಇಂದು ಬೆಳಗಿನ ಜಾವ 2.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬ್ಯಾಂಕ್ ಜನಾರ್ಧನ್ ನಿಧನದ ಸುದ್ದಿ ಸ್ಯಾಂಡಲ್ವುಡ್ಗೆ ಅತಿ ದೊಡ್ಡ ಆಘಾತವನ್ನು ಉಂಟು ಮಾಡಿದೆ. ನಟ ತಬಲಾ ನಾಣಿ ಅವರು ಹಿರಿಯ ಗೆಳೆಯನ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ. ನಟ ಕೋಮಲ್ ಅವರು ಮೊದಲ ಸಿನಿಮಾದಿಂದ ತಂದೆ ಪಾತ್ರದಲ್ಲಿ ನಟಿಸಿದ್ರು. ಅವ್ರ ಸಾವು ನೋವು ತಂದಿದೆ. ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.
ಹಿರಿಯ ನಟ ರವೀಂದ್ರ ಅವರು ಹಾಸ್ಯನಟ, ಪೋಷಕ ನಟ ಆತ್ಮೀಯ ವ್ಯಕ್ತಿ ಬ್ಯಾಂಕ್ ಜನಾರ್ಧನ್ ಕೊನೆಯುಸಿರೆಳೆದ್ದಿದ್ದಾರೆ. ಮಣಿಪಾಲ್ ಆಸ್ಪತ್ರೆಯಿಂದ ಅವರ ಸ್ವಗೃಹಕ್ಕೆ ಪಾರ್ಥಿವ ಶರೀರ ತರಲಾಗಿದೆ. ಮನೆಯಲ್ಲಿ ಪೂಜೆ ವಿಧಿವಿಧಾನ ನಡೆದ ಮೇಲೆ ಮಧ್ಯಾಹ್ನ 12.30ರ ಬಳಿಕ ರವೀಂದ್ರ ಕಲಾಕ್ಷೇತ್ರಕ್ಕೆ ಶಿಫ್ಟ್ ಮಾಡಲಾಗುವುದು ಎಂದಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 2ಗಂಟೆಯಿಂದ 3.30ರವರೆಗೆ ಬ್ಯಾಂಕ್ ಜನಾರ್ಧನ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಪೀಣ್ಯಾದಲ್ಲಿ ಕ್ಷತ್ರಿಯ ಸಂಪ್ರದಾಯದಂತೆ ಬ್ಯಾಂಕ್ ಜನಾರ್ಧನ್ ಅವರ ಅಂತಿಮ ವಿಧಿವಿಧಾನ ನಡೆಯಲಿದೆ ಎಂದು ಆಪ್ತರು ತಿಳಿಸಿದ್ದಾರೆ.
Log in to write reviews