ಪಾಕಿಸ್ತಾನ ಭಾರತದ ಮೇಲೆ ನಿರಂತರ ದಾಳಿಗೆ ಯತ್ನಿಸುತ್ತಿದೆ. ಅದರಂತೆ ನಿನ್ನೆಯೂ ಕೂಡ ಕೆಲವು ಪ್ರಮುಖ ನಗರಗಳ ಮೇಲೆ ಡ್ರೋಣ್ ದಾಳಿಗೆ ಯತ್ನಿಸಿ ವಿಫಲವಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಇಂದು ಬೆಳಗ್ಗೆ ಭಾರತೀಯ ಸೇನಾಧಿಕಾರಿಗಳು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ಸೇರಿದಂತೆ ಸುಮಾರು 36 ನಗರಗಳನ್ನು ಗುರಿಯಾಗಿಸಿಕೊಂಡು ಪಾಕ್ ಡ್ರೋಣ್ ದಾಳಿಗೆ ಯತ್ನಿಸಿದೆ ಎಂದು ತಿಳಿಸಿದೆ.
ಪ್ರತಿಯಾಗಿ ಪಾಕಿಸ್ತಾನದ 4 ವಾಯು ರಕ್ಷಣಾ ತಾಣಗಳ ಮೇಲೆ ನಮ್ಮ ಸೇನೆ ದಾಳಿ ಮಾಡಿದೆ. ಡ್ರೋನ್ ಮೂಲಕ ವಾಯು ರಕ್ಷಣಾ ರಡಾರ್ ನಾಶ ಮಾಡುವಲ್ಲಿ ಯಶಸ್ವಿಯಾಗಿದೆ. ಭಾರತದ ಪ್ರತೀಕಾರದ ದಾಳಿಗೆ ಪಾಕಿಸ್ತಾನ ದೊಡ್ಡ ನಷ್ಟ ಅನುಭವಿಸಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ತಿಳಿಸಿದ್ದಾರೆ.
ಪಂಜಾಬ್ನ ಅಮೃತಸರದ ಐದು ಪ್ರದೇಶಗಳಲ್ಲಿ 15 ಡ್ರೋಣ್ಗಳನ್ನು ಹೊಡೆಯಲಾಗಿದೆ. ಈಗಲೂ ಕೂಡ ಆ ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಹೆಚ್ಚಿನ ಡ್ರೋಣ್ಗಳನ್ನು ತಟಸ್ಥಗೊಳಸಿದೆ ಅಂತಾ ಸೇನೆ ತಿಳಿಸಿದೆ.
ಪಂಜಾಬ್ನ ಫಿರೋಜ್ಪುರ್ನಲ್ಲಿ ಮನೆಗೆ ಪಾಕಿಸ್ತಾನದ ಡ್ರೋಣ್ ಅಪ್ಪಳಿಸಿದೆ. ಪರಿಣಾಮ ಮನೆಯಲ್ಲಿದ್ದ ಕುಟುಂಬದವರಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶ್ರೀನಗರ ವಿಮಾನ ನಿಲ್ದಾಣದ ಮೇಲೆ ರಾತ್ರಿ 9 ಗಂಟೆ ಸುಮಾರಿಗೆ ಡ್ರೋಣ್ ಹಾರುತ್ತಿರುವುದು ಕಂಡು ಬಂದಿತ್ತು. ಇದನ್ನು ಗಮನಿಸಿದ ಭಾರತದ ಸೇನೆ ಹೊಡೆದು ಹಾಕಿದೆ. ಪಶ್ಚಿಮ ಗಡಿಗಳಲ್ಲಿ ಡ್ರೋಣ್ ದಾಳಿ ಮತ್ತು ಇತರ ಯುದ್ಧಸಾಮಗ್ರಿಗಳೊಂದಿಗೆ ಪಾಕಿಸ್ತಾನದ ದಾಳಿ ಮುಂದುವರೆದಿದೆ ಅಂತಾ ಸೇನೆ ತಿಳಿಸಿದೆ.
Log in to write reviews