No Ads

ರಮಿತಾಳ ರಮಿಸುವ ಆಟಕ್ಕೆ ಗಂಡ ಬಲಿ ; ಪೋಸ್ಟ್ಮಾರ್ಟಮ್ ರಿಪೋರ್ಟ್ ಹೇಳಿದ್ದು.. ಹಾವು ಅಪರಾಧಿಯಲ್ಲ

India 2025-04-17 16:32:12 112
post

ಉತ್ತರ ಪ್ರದೇಶದ ಮೀರತ್​ನಲ್ಲಿ ಮತ್ತೊಂದು ಊಹೆಗೂ ನಿಲುಕದ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಸತ್ತು ಬಿದ್ದಿದ್ದ ಗಂಡನ ನೋಡಿ ಹೆಂಡತಿ ಗಂಟಲು ಬಿರಿಯುವಂತೆ ಕೂಗಿದ್ದಳು. ಗಂಡನ ಮೃತದೇಹದ ಪಕ್ಕದಲ್ಲೇ ಒಂದು ನಾಗರಹಾವು ಹೆಡೆ ಬಿಚ್ಚಿ ಕೂತಿತ್ತು. ಆ ಹಾವು ಆ ವ್ಯಕ್ತಿಯನ್ನ 10 ಬಾರಿ ಕಚ್ಚಿ ಬುಸುಗುಡುತ್ತಿತ್ತು. ಅಲ್ಲಿ ಸತ್ತು ಬಿದ್ದಿದ್ದ ವ್ಯಕ್ತಿ ಹೆಸರು ಅಮಿತ್​.

ಕೂಡಲೇ ಅಮಿತ್‌ ಪೋಷಕರು ಹಾವು ಹಿಡಿಯುವವರನ್ನ ಕರೆಸಿದರು. ಹಾವು ಹಿಡಿದ ಮೇಲೆ, ಆ ವ್ಯಕ್ತಿಯ ಪತ್ನಿ ಗಂಡನ ಮೃತದೇಹದ ಮೇಲೆ ಬಿದ್ದು, ಕಣ್ಣೀರ ಕೋಡಿ ಹರಿಸಿದ್ದಳು. ಇಡೀ ಊರೇ ಅಯ್ಯೋ ಎಂಥಾ ದುರ್ವಿಧಿ ಇದು. ಮಲಗಿದ್ದವನನ್ನ ಈ ಹಾವು ಕೊಂದು ಬಿಟ್ಟಿದೆ ಅಂತ ಹಾವನ್ನ ಶಪಿಸುತ್ತಿದ್ದರು. ಮುತ್ತೈದೆಗೆ ಆಶೀರ್ವಾದಿಸಬೇಕಿದ್ದ ನಾಗರಹಾವು ಈ ಹೆಣ್ಣಿನ ಕುಂಕುಮವನ್ನ ಕಿತ್ತು ಕೊಂಡುಬಿಟ್ಟ ಅಂತ ಗೋಳಾಡುತ್ತಿದ್ದರು.

ಘಟನಾ ಸ್ಥಳಕ್ಕೆ ಬಂದಿದ್ದ ಪೊಲೀಸರು, ಅಮಿತ್​ನ ಮೃತದೇಹವನ್ನ ಪೋಸ್ಟ್​ ಮಾರ್ಟಮ್​ಗೆ ಕಳಿಸಿಕೊಟ್ಟಿದ್ದರು. ಆದರೆ ಪೋಸ್ಟ್ ​ಮಾರ್ಟಮ್​​ ರಿಪೋರ್ಟ್​​ ನೋಡಿದ ಮೇಲೆ, ಪೊಲೀಸರಿಗೆ ಶಾಕ್​ ಆಗಿತ್ತು. ಆ ರಿಪೋರ್ಟ್​ನಿಂದಲೇ ಅಸಲಿ ಕಥೆ ಬಯಲಾಗಿತ್ತು. ಪೋಸ್ಟ್​ಮಾರ್ಟಂ ರಿಪೋರ್ಟ್​ ಪ್ರಕಾರ ಅಮಿತ್​​ ಹಾವು ಕಚ್ಚಿ ಸತ್ತಿರಲಿಲ್ಲ. ಬದಲಿಗೆ ಉಸಿರುಗಟ್ಟಿ ಸತ್ತಿದ್ದ

ಆ ನಾಗರ ಹಾವು ಅಮಿತ್​ನನ್ನು ಕಚ್ಚಿದ್ದು ನಿಜ ಆದ್ರೆ ಅಮಿತ್​ ಹಾವು ಕಚ್ಚೋದಕ್ಕೂ ಮುನ್ನವೇ ಜೀವ ಬಿಟ್ಟಿದ್ದ. ಅಮಿತ್​ ಜೀವ ಬಿಡೋಕು ಮುಂಚೆ, ಹಾವು ಅಮಿತ್​ ಬಳಿ ಬರುವ ಮುಂಚೆ, ಅಮಿತ್​ ಪಕ್ಕದಲ್ಲೇ ಇದ್ದವಳು ಅಮಿತ್​​ ಪತ್ನಿ ರಮಿತಾ.

ರಮಿತಾ, ಅಮಿತ್​ನ ಮಡದಿ. ಆಕೆಗೆ ಅಮರದೀಪ್‌ ಎಂಬ ಪರ ಪುರುಷನ ಜೊತೆ ಅಕ್ರಮ ಸಂಬಂಧ ಇತ್ತು. ಇದಕ್ಕೆ ಪತಿ ಅಡ್ಡಿಯಾಗಿದ್ದ. ರಮಿತಾಳ ಪ್ರಿಯಕರ ಈಗೀಗ ಮೀಸೆ ಚಿಗುರುತ್ತಿರೋ ಎಳೆ ಹುಡುಗ.

ಈ ವಿಚಾರ ಗೊತ್ತಾಗಿ ಅಮಿತ್​ ರಮಿತಾಳಿಗೆ ವಾರ್ನಿಂಗ್​ ಕೊಟ್ಟಿದ್ದ. ಹಾಗೆ ಆ ಹುಡುಗನಿಗೂ ಎಚ್ಚರಿಕೆ ಕೊಟ್ಟಿದ್ದ. ಆದರೆ ರಮಿತಾಳಿಗೆ ಗಂಡನ ವಾರ್ನಿಂಗ್​ ತಲೆಗೇರಿಲಿಲ್ಲ. ಯಾಕಂದ್ರೆ ತಲೆ ತುಂಬಾ ಪ್ರಿಯಕರನೇ ಇದ್ದ. ಒಂದು ದಿನ ಇಬ್ಬರು ಸೇರಿ, ಗಂಡನನ್ನ ಮುಗಿಸುವ ಪ್ಲ್ಯಾನ್​ ಮಾಡಿದ್ದರು. ಆ ದಿನ ಅಮಿತ್​ ಊಟ ಮುಗಿಸಿ ಮಲಗಿದ್ದಾಗ, ರಮಿತಾ ಮನದನ್ನೆಯನ್ನ ಕರೆಸಿದ್ದಳು. ಆ ದಿನ ಇಬ್ಬರು ಮಲಗಿದ್ದ ಅಮಿತ್​ನ ಉಸಿರುಗಟ್ಟಿಸಿ ಕೊಂದೇ ಬಿಟ್ಟಿದ್ದರು.

ಗಂಡನನ್ನು ಕೊಲೆ ಮಾಡಿದ ಬಳಿಕ ರಮಿತಾಳಿಗೆ ಬಂಧನದ ಭೀತಿ ಶುರುವಾಗಿ, ಕೊಲೆಯನ್ನ ಆಕಸ್ಮಿಕ ಸಾವಂತೆ ಬಿಂಬಿಸೋಕೆ ಸಿದ್ಧಳಾಗಿದ್ದಳು. ಆಗ ಆಕೆಗೆ ಬಂದಿದ್ದ ಉಪಾಯವೇ ಈ ನಾಗರಹಾವು. ಸತ್ತು ಬಿದ್ದಿದ್ದವನ ಬೆಡ್​ ಮೇಲೆ ಹಾವನ್ನ ಬಿಟ್ಟು, ಅದು ಗಂಡನನ್ನ ಕಚ್ಚುವವರೆಗೂ ಕಾದು ನೋಡಿ. ಹಾವು 10 ಬಾರಿ ಕಚ್ಚಿದ ಮೇಲೆ ಹಾವು, ಹಾವು ಅಂತ ಕೂಗಾಡಿದ್ದಾಳೆ.

ಆ ದಿನ ಅಮಿತ್​ನ ನೋಡಿದವರೆಲ್ಲಾ ಮನೆಯವರೂ ಸೇರಿ, ಹಾವು ಕಚ್ಚಿದರಿಂದಲೇ ಅಮಿತ್ ಜೀವ ಹೋಗಿದೆ ಅಂತ ಅಂದುಕೊಂಡಿದ್ದರು. ಆದ್ರೆ ಮಾಸ್ಟರ್​ ಪ್ಲಾನ್​ ಮಾಡಿ, ಗಂಡನ ಮರ್ಡರ್ ಮಾಡಿದ್ದ, ರಮಿತಾಳ ರಮಿಸುವ ಆಟಕ್ಕೆ ಬ್ರೇಕ್​ ಬೀಳಿಸಿದ್ದು ಪೋಸ್ಟ್​ ಮಾರ್ಟ್​​ಂ ರಿಪೋರ್ಟ್​​.

ಗಂಡನ ಕೊಂದು ಪ್ರಿಯಕರನಿಗೆ ವಶವಾಗಬೇಕೆಂದಿದ್ದ ರಮಿತಾ, ಅತ್ತ ಗಂಡನೂ ಇಲ್ಲದೇ, ಇತ್ತ ಪ್ರೇಮಿಯೂ ಇಲ್ಲದೇ ಕೊಲೆಗಾತಿಯಾಗಿ ಜೈಲು ಸೇರಿದ್ದಾಳೆ. ರಮಿತಾಳ ಕ್ರೈಮ್​ ಮೈಂಡ್​ ಬಗ್ಗೆ ತಿಳಿದು ಇಡೀ ಊರಿನ ಜನ ದಂಗಾಗಿದ್ದಾರೆ.

 

No Ads
No Reviews
No Ads

Popular News

No Post Categories
Sidebar Banner
Sidebar Banner