No Ads

ಅಪ್ಪ ಮಗನ ಜಗಳ , ತಂದೆಯ ಕೊಂದು ವಿದ್ಯುತ್ ಶಾಕ್ ಕಥೆ ಕಟ್ಟಿ ಸಿಕ್ಕಿಬಿದ್ದ!

ಜಿಲ್ಲೆ 2025-05-14 17:02:55 425
post

ಐಸ್‌ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಅಪ್ಪ-ಮಗನ ನಡುವೆ ಜಗಳ ನಡೆದಿದೆ. ಕೋಪದಲ್ಲಿ ಅಪ್ಪ ಮಗನಿಗೆ ಹೊಡೆದಿದ್ದಾನೆ. ಇದರಿಂದ ತಪ್ಪಿಸಿಕೊಂಡ ಮಗ ಟವೆಲ್‌ನಿಂದ ಅಪ್ಪನ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ, ಕೊಲೆ ಮುಚ್ಚಿಡಲು ಅಪ್ಪನಿಗೆ ಕರೆಂಟ್ ಹೊಡೆದಿದೆ ಎಂದು ಬಿಂಬಿಸಿ ಪ್ರಕರಣ ಮುಚ್ಚಿ ಹಾಕಿದ್ದಾನೆ. ಆದರೆ, ಸಿಸಿಟಿವಿ ಪರಿಶೀಲನೆ ಮಾಡಿದಾಗ ಮಗನೇ ಅಪ್ಪನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 

 

ಈ ಘಟನೆ ಮೇ 11ರ ರಾತ್ರಿ ವೇಳೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ. ಐಸ್ಕ್ರೀಂ ಫ್ಯಾಕ್ಟರಿ ಮಾಲೀಕ ನಾಗೇಶ್ (58) ಸಾವನಪ್ಪಿದ್ದ ವ್ಯಕ್ತಿ ಆಗಿದ್ದಾನೆ. ಹೆಬ್ಬೂರಿನ ತಿಮ್ಮಸಂದ್ರ ಗ್ರಾಮದ ನಿವಾಸಿಯಾಗಿದ್ದ ನಾಗೇಶ್, ಕುಣಿಗಲ್‌ನಲ್ಲಿ ಐಸ್‌ಕ್ರೀಂ ಫ್ಯಾಕ್ಟರಿ ಹೊಂದಿದ್ದರು. ಇಲ್ಲಿ ರಾತ್ರಿ ವೇಳೆ ಕೆಲಸ ಮಾಡುವಾಗ ಅಪ್ಪ ನಾಗೇಶ್ ಹಾಗೂ ಮಗ ಸೂರ್ಯ ಇಬ್ಬರೂ ಕಾರ್ಖಾನೆಯಲ್ಲಿದ್ದರು. ಮಧ್ಯರಾತ್ರಿ 1.45ರ ವೇಳೆಗೆ ತಂದೆ ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಅಪ್ಪನಿಗೆ ಸಿಟ್ಟು ಬಂದು ಮಗನ ಕಪಾಳಕ್ಕೆ ಒಂದೆರೆಡು ಏಟು ಹೊಡೆದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಮಗ ಮರು ಮಾತನಾಡಿದ್ದಕ್ಕೆ ಕೋಪಗೊಂಡು ಚಪ್ಪಲಿಯಿಂದಲೂ ಹೊಡೆದಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ.

ಇಷ್ಟಕ್ಕೆ ಸುಮ್ಮನಾಗದ ನಾಗೇಶ್ ಪುನಃ ಮಗ ಸೂರ್ಯನಿಗೆ ಕಬ್ಬಿಣದ ರಾಡ್ ಅನ್ನು ಎತ್ತಿಕೊಂಡು ಹೊಡೆತ್ತಾನೆ. ಆಗ ಮಗ ತನ್ನ ತಂದೆಯನ್ನು ತಡೆಯಲು ಪ್ರಯತ್ನಿಸುತ್ತಾನೆ. ಸುಮ್ಮನಾಗದಿದ್ದಾಗ ತಾನು ಕೈಯಲ್ಲಿ ಹಿಡಿದುಕೊಂಡಿದ್ದ ಬಿಳಿ ಟವೆಲ್‌ನಿಂದ ಅಪ್ಪನ ಕುತ್ತಿಗೆಗೆ ಹಾಕಿ ಕೆಳಕ್ಕೆ ಬೀಳಿಸಿ ಕತ್ತನ್ನು ಟವೆಲ್‌ನಿಂದ ಹಿಸುಕಿ ಉಸಿರುಗಟ್ಟಿಸುತ್ತಾನೆ. ಇದೇ ಸಮಯಕ್ಕೆ ಸೂರ್ಯನ ಸ್ನೇಹಿತ ಐಸ್‌ಕ್ರೀಂ ಫ್ಯಾಕ್ಟರಿ ಒಳಗೆ ಬಂದು ಸೂರ್ಯನ ಅಪ್ಪ ಒದ್ದಾಡುತ್ತಿದ್ದುದನ್ನು ತಡೆಯಲು ಎರಡೂ ಕೈಗಳನ್ನು ಎತ್ತಿಕೊಂಡು ಬಿಗಿಯಾಗಿ ಹಿಡಿದುಕೊಳ್ಳುತ್ತಾನೆ. ಆಗ ಸೂರ್ಯ ಅಪ್ಪನ ಬೆನ್ನ ಮೇಲೆ ಕುಳಿತು ಟವೆಲ್‌ನಿಂದ ಕುತ್ತಿಗೆಗೆ ಬಿಗಿಯಾಗಿ ಟವೆಲ್ ಬಿಗಿದು ಕೊಲೆ ಮಾಡುತ್ತಾರೆ. ಆಗ ಸತ್ತಿರುವುದು ಖಚಿತವಾಗಿತ್ತದೆ.

ನಾಗೇಶನನ್ನು ಕೊಲೆ ಮಾಡಿದ್ದನ್ನು ಮುಚ್ಚಿಡಲು ಇಬ್ಬರೂ ಸೇರಿಕೊಂಡು ಇದಾದ ನಂತರ ಫ್ಯಾಕ್ಟರಿಯಲ್ಲಿದ್ದ ಅಪ್ಪ ಮಲಗುವ ಹಾಸಿಗೆಯ ಬಳಿ ಶವವನ್ನು ಎತ್ತಿಕೊಂಡು ಹೋಗಿ ಕರೆಂಟ್ ಶಾಕ್ ನೀಡಿದ್ದಾರೆ ಎನ್ನಲಾಗುತ್ತಿದೆ. ನಂತರ, ಬೆಳಗ್ಗೆ ವೇಳೆ ಅಪ್ಪ ಕರೆಂಟ್ ಶಾಕ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಮನೆಯವರಿಗೆ ಮಾಹಿತಿ ನೀಡುತ್ತಾರೆ. ಮನೆಯವರು ಗೋಳಾಡುತ್ತಾ ಬಂದು ಮೃತದೇಹವನ್ನು ತೆಗೆದುಕೊಂಡು ಅಂತ್ಯಕ್ರಿಯೆ ನಡೆಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಾರೆ. ಈ ಕೊಲೆಯಿಂದ ಇಬ್ಬರೂ ಆರೋಪಿಗಳು ಪಾರಾಗಿಬಿಟ್ಟರು ಎನ್ನುವ ಹಂತಕ್ಕೆ ತಲುಪುತ್ತದೆ.

ಆದರೆ, ನಾಗೇಶ್ ಅವರ ಸಹೋದರಿ ಮಾತ್ರ ಅಣ್ಣನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ, ಕೂಡಲೇ ಹೋಗಿ ಪೊಲೀಸರಿಗೆ ದೂರು ಕೊಡುತ್ತಾರೆ. ಮರಣೋತ್ತರ ಪರೀಕ್ಷೆ ಮಾಡುವಂತೆ ಆಗ್ರಹ ಮಾಡುತ್ತಾರೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪ್ರಾಥಮಿಕ ತನಿಖೆ ಮಾಡಲು ಸಿಸಿಟಿವಿ ಫೂಟೇಜ್ ವೀಕ್ಷಣೆ ಮಾಡುತ್ತಾರೆ. ಆಗ ಮಗನಿಂದಲೇ ಅಪ್ಪನ ಕೊಲೆ ಆಗಿರುವ ಘಟನೆ ಬೆಳಕಿಗೆ ಬರುತ್ತದೆ. ಇದೀಗ ತಂದೆಯನ್ನೇ ಕೊಲೆ ಮಾಡಿದ ಆರೋಪಿ ಸೂರ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಇವನಿಗೆ ಸಹಾಯ ಮಾಡಿದ ಸ್ನೇಹಿತ ಧನುಷ್‌ ಎಂಬ ಯುವಕನನ್ನೂ ಬಂಧಿಸಲಾಗಿದೆ. ಇನ್ನು ಮಗ ಪ್ರೀತಿ ಮಾಡುತ್ತಿದ್ದ ಹುಡುಗಿ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner